ಶನಿವಾರ, ಮಾರ್ಚ್ 21, 2009

ಹರೆಯ

ಪ್ರಬುದ್ಧ ಪ್ರಭೆಯ ಮತ್ತೊಂದು ಮಗ್ಗುಲಲಿ ಕಣ್ತುಂಬ ಕುಕ್ಕಿದೆ ಗಾಢಾಂಧಕಾರ.
ಹುಟ್ಟಿನೊಡನೆಯೇ ಸಾವೂ ಹುಟ್ಟಿ ,ಹುಟ್ಟನ್ನು ಕಳೆಯುತ್ತದೆನ್ನುವ ಸತ್ಯಕ್ಕೀಗ ಸುಳ್ಳೇ ಜ್ವರ.
ಮಾಯೆ ಅನಂತ ವಿರಹದ ಬಲೆ ಬೀಸಿದೆ; ಬಯಸಿದೆ ಸಂಗಾತಿಯ ಸಂಗಡ ಸಂಭ್ರಮದ ಸಂಚಾರ.
ಸಂಗಾತಿಯ ಸಂಗತಿಗಳಿಲ್ಲದೇ ಸಂಘಾತಕ್ಕೊಳಗಾಗಿದೆ ಕರಣ, ತೂರಾಡಿದೆ ತೂಗುದೀಪ; ಮನವೀಗ ಮರ್ಕಟ ಲಾಂದ್ರ.

ದಿಕ್ಕುಗಾಣದೆ ನೂರು ದಿಕ್ಕಿನೆಡೆ ನೋಟ.
ತಪ್ಪಿಸಿಕೊಳ್ಳಲು ಕವಲುದಾರಿಗಳೊಳಗೆ ಗಾಣದೆತ್ತಿನ ಓಟ.
ಮಾರ್ಗಮಧ್ಯದೊಳಗೆ ಸುಸ್ತಾಗಿ ಒಳದಾರಿಗೆ ಹುಡುಕಾಟ.
ಅಡ್ಡದಾರಿಯ ಕೈಸನ್ನೆ, ಸಮ್ಮೋಹಿನಿಯ ಸೆಳೆತ; ಹೊರಳು ಹಾದಿಯಲಿ ದೊರೆತ ಸಮಯ ಸಾಧಕರ ಕೂಟ.

ಮುಳುಗೇಳುತ ನದಿನಡುವೆ ದೋಣಿದ್ವಯಗಳ ಆಶ್ರಯಿಸುತ,
ಹಪಹಪಿಸಿ ಪರಿತಪಿಸಿ ಸುಳಿಯ ಕಡೆಗೋಡುತ.
ಭೂತದನುಭವವಿಲ್ಲ, ಭವಿಷ್ಯಕೆ ಭಾಷ್ಯ ಬರೆದಿಲ್ಲ.
ಭವದಿ ಬೆಂದಿದೆ ಜೀವ: ಇಂದೆನ್ನುವುದು ಈಗ ಸಿಗುತ್ತಲೇ ಇಲ್ಲ.

ಪ್ರಾಯವೆನ್ನುವುದು ಪ್ರಾಯಃ ಪ್ರತಿಜೀವಿಯ ಅನಿವಾರ್ಯ ಅವ್ಯವಸ್ಥಿತ ಪಯಣ.
ಪ್ರತಿನದಿಯ ದೆಸೆಗಿರುವ ನೆರೆಯ ಅನುಭವದಂತೆ. ಜೀವನದ ಜೀವೋನ್ಮಾದ ನರ್ತನ.
ಎದುರಿಸಬಲ್ಲದೇ ಮನಸು ಸ್ಥಿತಿಯ ಪ್ರಳಯಗಳ, ಅನುಭವದ ಅಣೆಕಟ್ಟಿನಚ್ಚುಕಟ್ಟಿರದೆ?
ತಿಳಿನೀರಿಗೆ ಬೆಲೆಯಿಲ್ಲ, ಒಂದು ಬಾರಿಯಾದರೂ ಅದು ಕಲ್ಮಣ್ಣು ರಾಡಿಗಳ ಕಾಣದೆ.

ಉಕ್ಕಿನಂತಿಹ ಸೊಕ್ಕು, ಬುದ್ಧಿಗೆ ಹಿಡಿದಿಹ ತುಕ್ಕು, ರೊಕ್ಕದಿಕ್ಕಳ ಮೀರಿ ಬೆಳೆಯಬೇಕು ಹೃದಯ;
ನವ ಭಾವ ಸಂಸ್ಕಾರ, ನವ ಪ್ರಾಣ ಸಂಚಾರ, ಮನ್ಮಥನ ಶರ ಸೋಕಿ ಶಿವಶಕ್ತಿ ಸಂಚಯ.
ದೌರ್ಬಲ್ಯಗಳನೆಣಿಸಿ, ಅದನೆ ಮೆಟ್ಟಿಲಂದದಿ ಬಳಸಿ, ಮನಮಥಿಸಿ, ಮಾಯೆಯ ಮಣಿಸಿ.-
ಮುಂದೆ ಕಾದಿಹುದು ತಾರುಣ್ಯಕೆ ವಿಜಯ.
ಮಹತ್ ಸೋಲನು ಕೂಡ ಮಹಾನ್ ಗೆಲುವೆಂದೆಣಿಸಿ ಮುಂದೆ ನಡೆಯುವುದೇ ಹರೆಯ.

ಪ್ರಿಯ ಮಿತ್ರ ಮಂಡಲಕ್ಕೆ ನನ್ನ ನಮಸ್ಕಾರಗಳು. ಹಿಂದೆ "ಯೌವ್ವನ" ಎಂಬ ಒಂದು ಕವಿತೆಯನ್ನು ತರುಣ ಭಾವದಲ್ಲಿ ಭಾವಾವಿಷ್ಟನಾಗಿ ಬರೆದಿದ್ದೆ. ಆದರೂ ಆ ಜೀವನದ ಜೀವೋತ್ಸಾಹದ ಪ್ರಮುಖ ಭಾವವಾದ ಗೊಂದಲಮಯ ಜಗತ್ತನ್ನು ಆ ಕವನದಲ್ಲಿ ಸಾಕಷ್ಟು ವ್ಯಕ್ತಪಡಿಸಲಲು ಸಾಧ್ಯವಾಗದೇ ಹೋಯ್ತು. ಅದರಲ್ಲಿ ಒಂದು ರಭಸವಿತ್ತು, ವೇಗವಿತ್ತು. ಆದರೆ ರಭಸವೇ ಇಲ್ಲದ ಜಡತೆಯೇ ಜೀವನವಾದ ಸಂದರ್ಭಗಳೂ ಸಾಕಷ್ಟು ಇಲ್ಲದಿಲ್ಲ. ಅಸಹಾಯಕನ ಅಳಲು ಆರ್ತತೆ, ದಿಕ್ಕೇ ತೋಚದಂತಾಗಿ ಬುದ್ಧಿ ಭ್ರಮೆ ಹಿಡಿಯುವ ಪರಿಸ್ಥಿತಿ, ಎಲ್ಲವೂ ಹರೆಯದ ಅವಿಭಾಜ್ಯ ಅಂಗವೇ ಆಗಿದೆ. ಹಾಗಂತ ಕವನದಲ್ಲಿ ಬರೀ ಗೋಜಲುಗಳನ್ನೇ ಕೊಟ್ಟಿರುವೆನೆಂದು ತಿಳಿಯಬೇಕಾಗಿಲ್ಲ. ಅಡ್ಡಡ್ಡಾಗಿ ಹೆಣೆದ ಬಲೆಯನ್ನೂ ಜೊತೆಗೆ ಅದನ್ನು ಬಿಚ್ಚುವ ಹಲವು ದಾರಗಳನ್ನೂ ಮನೋ ಅನುಭವದಂತೆ ಚಿತ್ರಿಸಿದ್ದೇನೆ. ದಾರಗಳು ಸೂತ್ರ ಹರಿಯುವಂತಿವೆಯೇ ಅಥವಾ ಸೂತ್ರಗಳೇ ಅರ್ಥವಾಗದಂತಾಗಿವೆಯೇ ನೀವೇ ಪ್ರತಿಕ್ರಯಿಸಬೇಕು. ಪದ್ಯದಲ್ಲಿ ಬಂದಿರುವ 'ಪಂಚಮ' ಎಂಬ ಪದವನ್ನು ಪಂಚೇಂದ್ರಿಯಗಳು ಅಂತ ಗ್ರಹಿಸಬೇಕು. ಅಥವಾ ಸ್ವರದ ಪಂಚಮ 'ಪ' ಅಂತ ಗ್ರಹಿಸಿದರೂ ಪರವಾಗಿಲ್ಲ. ಆರೋಹಣದಲ್ಲಿ ಪಂಚಮಿ ಸ್ವರ ವಿಕೃತಿಯಾಗಿದೆ ಅಂತ ಗ್ರಹಿಸಬಹುದು.

1 ಕಾಮೆಂಟ್‌:

Prashant ಹೇಳಿದರು...

it's nice to see your blog man....nice poems and essays...

ಬೆಂಬಲಿಗರು

ನನ್ನ ಬಗ್ಗೆ

electrical engineer working in Mangalore chemicals and fertilisers. Mangalore