ಮೊದಲನೋಟ:
ನೀ ನನ್ನ ಮನದೊಳಂದು ಹರಿಣದೋಟದಿ ಓಡಿ ನನ್ನಚಲಚಿತ್ತ ಚಲಿಸಿದ್ದು ಸುಳ್ಳಲ್ಲವು.
ಗೋ ಮಂದೆಯೊಳಗೊಂದು ಮುದ್ದು ಕರು ಕಂಡಂತಾಗಿ ನಿನ್ನ ಮೇಲುಕ್ಕಿದ ಪ್ರೇಮಕೆ ಕೊನೆಯಿಲ್ಲವು.
ಬರೀ ಸೌಂದರ್ಯದ ರಾಶಿಯಲ್ಲ ನೀನು; ಸುಗುಣ ಸನ್ನಡತೆಗಳ ಕಾಶಿ.
ಈ ಎದೆಗೂಡಿನೊಳಗೆ ಚೆಲ್ಲುತಿರುವ ಕಾಂತಿಯು ನೀನೆ; ಇದಕೆನ್ನ ಮನವೆ ಸರ್ವಸಾಕ್ಷಿ.
ಪ್ರೀತಿಯೂಟ:
ಮೊದಲಸಲ ನಿನ್ನ ಮನೆಗೆ ಬಂದಾಗಿನ ಅತಿಥಿ ಸತ್ಕಾರವನು ನಾನು ಮರೆಯುವೆನೇನು?
ಕಣ್ಣೋಟವು ಕರದಂಟು,ಕೇಸರಿಬಾತಿಗಿಂತ ಸಿಹಿಯಾಯ್ತು, ನಿನ್ನುಪಚಾರದ ಮಾತದು ಸವಿಜೇನು.
ಬೆಳಕೋಡಿದಂತಾಯ್ತು ನಡೆಯುತ್ತಿರಲು ನೀನು, ಲಜ್ಜೆಯಲಿ ಕೆಂಪುಗಲ್ಲವ ಹೊತ್ತು ಆಚೆಯಿಂದೀಚೆ;
ಅಳಿಸಲಾಗದಂತೆ ಕಂಗೊಳಿಸಿತು ನಾನು ಹೃದಯದಲಿ ಹಾಕಿದ್ದ-ನಿನ್ನ ಸುಮನೋಹರ ಮೊಗದ ಹಚ್ಚೆ.
ಪ್ರೇಮ ಪಾಠ:
ನಾ ನಿನ್ನ ಜೊತೆ ತಿಂದ ಐಸ್ಕ್ರೀಂಗಳಿಗಿಂತ ತಂಪು ನಿನ್ನ ಕಣ್ಣುಗಳ ದೃಷ್ಟಿ;
ನಮ್ಮ ಪ್ರೇಮ ಸಂಕಲ್ಪದಂತೆ ಬಿಗಿಯಾಗಿ,ಹಿತವಾಗಿ ಬೆಚ್ಚಗಿಹುದು ನನ್ನ ಕೈಯ್ಯೊಳು ಬೆರೆತ ನಿನ್ನ ಕೈಮುಷ್ಠಿ.
ನಿನ್ನ ನಗುವಿನಲೆಗಳೊಳಗೆ ಮುಳುಗಿ,ದಂತಕಾತಿಯಲಿ ಬೆಳಗಿ ತೊಳಗುತಿದೆಯೆನ್ನ ಮನ, ಜಗವೆಲ್ಲ ನೀನೊಬ್ಬಳೇ ತುಂಬಿದಂತೆ;
ಕ್ಷಣ ಕ್ಷಣಗಳೂ ಭಾಗಭಾಗಗಳಾಗಿ ನಿನ್ನ ಬರುವಿಕೆಗೆ ಕಾಯುತಿವೆ ಚಿನ್ನ, ಸನ್ನದ್ಧವಾಗಿದೆ ಮೈಮನ-ನಗೆ ಹೂ ಸುರಿಸಿ ಆನಂದದ ಕಹಳೆ ಮೊಳಗುವಂತೆ.
ಕಚ್ಚೆ ಪಂಚೆ ಜರಿ ಪೇಟ:
ಥಳಥಳನೆ ಹೊಳೆವ ರೇಶಿಮೆ ಸೀರೆಯಂಚಿಗೆ ಬಂಗಾರದ ಕುಚ್ಚು; ಬಳುಕುವ ಸೊಂಟದ ಜೊತೆಯೇ ಬಳುಕಲು ವಡ್ಯಾಣದ ಸಂಚು!!
ಎಲ್ಲಿ ಯಾರನ್ನೋ ನೋಡುವ ನೆಪದೊಳಗೆ ಬಾಗಿಲ ಮರೆಯಿಂದ ನನ್ನ ಎದೆಯೆಡೆಗೇ ತೂರಿ ಬಂತು ಅವಳ ಕುಡಿನೋಟದ ಮಿಂಚು!!
ಅಭ್ಯಂಜನ,ಕಾಶಿಯಾತ್ರೆಗಳ ಮುಗಿಸಿ ಬಂದೆ ನಾನು ಬೇಗಬೇಗನೇ,ಅಂತರ್ಪಟದ ಮುಂದೆ ದಿನವೂ ಕ್ಷಣಗಳಾದವಂದು;
ಬೆಲ,ಜೀರಿಗೆಗಳ ನೆತ್ತಿಯ ಮೇಲೆ ಸುರಿದು ತಂಪಾಯಿತು ಮನಸು, ಕಟ್ಟಿದೆನು ಮೂರುಗಂಟು; ನೂರುeನ್ಮಗಳ ನಂಟಾಗಲೆಂದು.
ಸುಖ-ದುಃಖ ಸಮರಸದ ಬದುಕಿನಾಟ:
ಮಾತುಕೃತಿಗಳಲೆಲ್ಲ ಮನದ ಸ್ವಪ್ನದ ತುಂಬ, ತುಂಬಿ ತುಳುಕುತ ಚೆಲ್ಲಿ ಭಾಗ್ಯದುಷೆಯ;
ದಿಕ್ಕು ಕಾಣದೆ ನಿಂತು ದೆಸೆಯಿಲ್ಲದಾಗಿದ್ದೆ, ಭಾಗ್ಯಲಕ್ಷ್ಮಿಯಾಗಿ ತೋರಿದೆ ಬದುಕಲಿ ಹೊಸ ದಿಕ್ಕು ದೆಶೆಯ.
ಕೈ ಮಾತ್ರವಲ್ಲ, ಈ ಜೀವವನೆ ಹಿಡಿದಿರುವೆ ನೀ...... ಜೀವನದಿ ಜೀವನದಿಯಂತೆ ಹರಿದು
ವರ್ಷ ಪೂರ್ತಿ ಸುರಿಯಲಿ ನಿನ್ನ ಆನಂದ ವರ್ಷ; ಹರ್ಷದೋಕುಳಿಯಾಗು ಮಲ್ಲಿಗೆ ಹೂವಂತೆ ಬಿರಿದು.
ನಮಸ್ಕಾರ. ಎಲ್ಲ ಹುಡುಗರಿಗೂ ಸಾಮಾನ್ಯವಾಗಿ ಕ್ರಷ್ ಸಮಯದಲ್ಲಿ ಕಾಡುವ ಕನಸು ಅವು. ನನಗೂ ಕಾಡಿತ್ತು. ಕಾಡಿದ್ದನ್ನೇ ಕೂಡಿಹಾಕಿ ಕಲ್ಪನೆಯೊಂದಿಗೆ ಅದನ್ನು ನೂಕಿ, ಬಾಕಿ ತೀರಿಸಿದ್ದೇನೆ. ಬಾಕಿಯದ್ದು ನಿಮಗೆ ಬಿಟ್ಟದ್ದು.
ಏನೇ ಅಂದ್ರೂ ಆ ಕಲ್ಪನೆಯ ದಿನಗಳ ಮಜವೇ ಮಜ. ನಾವು ಶೂನ್ಯದೊಳಗೆ ಇರಬಹುದು. ಆದ್ರೆ ಆ ಶೂನ್ಯದಲ್ಲಿ ಎಲ್ಲವನ್ನ ತುಂಬಿಕೊಂಡು ಬದುಕುವ ದಿನಗಳಿವೆಯಲ್ಲ... ಅವು ಅಮೂಲ್ಯ ಮತ್ತು ಅತುಲ್ಯ.
ಎಲ್ಲರಿಗೂ ನಮಸ್ಕಾರ. ನಾನು ಹೀಗೆಯೇ ತರಗತಿಯೊಳಗೆ ಟೈಂಪಾಸ್ ಮಾಡೋದಕ್ಕೆ ಕವನ ಬರೆಯಲು ಶುರು ಮಾಡಿದೆ. ಆದರೆ ಅದು ತರಗತಿ ಮುಗಿದ ಮೇಲೂ ಮುಂದುವರಿದು ಬಿಡ್ತು. ಒಳ ಹೊರಗೆ ಬರೆದ, ಬರೆಯುತ್ತಿರುವ ಎಲ್ಲ ಬರಹಗಳನ್ನು ಈ ಮೂಲಕ ನಿಮ್ಮ ಮುಂದೆ ಇಡಲಿಚ್ಛಿಸುತ್ತಿದ್ದೇನೆ. ನನಗೆ ಅಷ್ಟೊಂದು ಶೃತಿ ಬದ್ಧವಾಗಿ ಅಲಂಕಾರಿಕವಾಗಿ ಸಂಕೀರ್ಣಶೈಲಿಯಲ್ಲಿ ಬರೆಯಲು ಬರುವುದಿಲ್ಲ. ನಡೆಯುವ ಮಗುವಿನ ಎಡವನ್ನು ಮನ್ನಿಸಿ,ಕೈ ಹಿಡಿದು ನಡೆಸುವಿರೆಂದು ತಿಳಿದಿರುವೆನು. ಓದಿ ಸಂತೋಷಿಸುವಿರೆಂದು ನನ್ನ ಭಾವನೆ. ನಿಮ್ಮ ಅಭಿಪ್ರಾಯವನ್ನು ಅಗತ್ಯವಾಗಿ ತಿಳಿಸಿ.
ಶುಕ್ರವಾರ, ಮಾರ್ಚ್ 20, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಬೆಂಬಲಿಗರು
ಬ್ಲಾಗ್ ಆರ್ಕೈವ್
ನನ್ನ ಬಗ್ಗೆ
- chaitanya chintana
- electrical engineer working in Mangalore chemicals and fertilisers. Mangalore
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ