ನೃತ್ಯ ನೂಪುರದಲ್ಲಿ ತಾಳ ತಂಬೂರಿಯಲಿ ಕಾಣದೇ ಕಾಣುತಲಿರುವೆ; ನೀ ನಾದ ಮಾಯೆ!
ನಿನ್ನ ವಾಣಿ ವಿಲಾಸ- ನುಡಿ ಅರ್ಥ ವಿಸ್ತರಿಸೆ, ರಸ ಋಷಿಯು ಆಗುವನು ಮಂತ್ರ ದ್ರಷ್ಟಾರ.
ನಿನ್ನ ವೀಣೆಯ ನಾದ ನೂರುರಾಗದಿ ನುಡಿಯೆ, ನೆಲಮುಗಿಲ ನಡುವಿನಲಿ ಸಿಡಿಲ ಸಂಚಾರ .
ಶಬ್ದದಡವಿಯ ನಡುವೆ ಸಿಲುಕಿರುವೆ ನಾನೀಗ. ಮರ ಮರದ ಮರ್ಮರವ ಕೇಳುತ್ತ ಕುಳಿತು.
ಹಣ್ಣೆಲೆಯು ಮಣ್ಣಾಗಿ, ಹಣ್ಣು ಬೀಜಗಳಾಗಿ ಚಿಗುರೊಡೆದ ಮೊಳಕೆಯಲಿ ಹೊಸ ಅರ್ಥ. ಧಾತು.
ಕಾಡಿನೆಲ್ಲೆಡೆ ಚೆಲುವು - ಕಾವ್ಯದಲ್ಲಿನ ಒಲವು ಹರಿದಂತೆ, ಸುರಿದಂತೆ ನಲಿದು;
ಮುಡಿಗೇರಬಯಸದ, ಮಡಿಯಾಗಲೊಲ್ಲದ ವನಸುಮದ ಪರಿಮಳವು ತೇಲಿಬಂದು.
ನೆಲ ಮುಗಿಲ ಸಂಧಿಸುವ ಸಂಭ್ರಮದ ಕ್ಷಣಕಾಗಿ ಬೇರೂರಿ ಕುಳಿತಿದೆ ಮರ, ಹಾರಲಿಕ್ಕೆ.
ಕಳಿತ ಫಲವೊಂದಕ್ಕೆ ಕಾದಿರುವೆ ನಾ ಕೆಳಗೆ. ಮರ ಪೂರ ಅರಗಿಸುವ ಸಾಹಸಕ್ಕೆ.
ಗೊಂಚಲಿಗೆ ಕೈ ಮಡಗಿ ದೀನನಾಗಿಹೆ ನಾನು; ಕರುಣಿಸು ಹೂಗಳನು ಮಾಲೆ ಕಟ್ಟಲಿಕ್ಕೆ.
ಮಧು ಬಟ್ಟಲಿಂದೊಂದು ಹನಿಯ ಬೇಡಿಹೆ ನಾನು; ಉದ್ಗೀಥದುದ್ಗಾರ ಮಾಡಲಿಕ್ಕೆ.
ಉದರದೊಳಗದರುತಿಹ ಪದ ನಾದ ಹೊರಹೊಮ್ಮಿಸು; ದವಡೆಗಳ ನಡುಸಿಕ್ಕಿ ಸಾಯದಂತೆ.
ಶಬ್ದ ನಿಧಿ ಪ್ರಾಂತದೆಡೆ ಕುಡಿ ನೋಟ ತೊಡು ಸಾಕು; ಅರ್ಪಿಸುವೆ ನವರತ್ನ ಕೃತಿಯ ಕಂತೆ.
ಪ್ರಜ್ಞೆಗೊಂದಾಜ್ಞೆ ಕೊಡು. ಸನ್ನಿಯಮಲುಣಿಸದಿರು. ಯಜ್ಞ ದೇವತೆ ನೀನು. ನಾನೊಂದು ದರ್ವಿ.
ಸರಸ್ವತೀ ಪ್ರವಾಹಕ್ಕೆ ಎದೆ ಸೆಟೆವ ಹೃದಯ ಕೊಡು. ಗುಂಡಿಗೆ ಕಾಂಡಕ್ಕೆ ಹರಿಸಿ ಅರುಣ ರಶ್ಮಿ.
ನನ್ನ ಸಂವೇದನೆಗಳಿಗೆ ಪದಗಳೇ ಸಿಕ್ಕದೆ ಪರದಾಡಿ ಕೊನೆಗೆ ವಾಕ್ಕಿನ ಅಧಿದೇವತೆಯಾದ ಶಾರದೆಯನ್ನು ಪ್ರಾರ್ಥಿಸಿದ ಕವನ ಇದು. ಬರೆದು ತುಂಬ ದಿನ ಆಯ್ತು. ಒಮ್ಮೆ ನನ್ನ ಭಾವನೆಗಳು ಮಾತಿನ ರೂಪ ಪಡೆಯಲು ಒದ್ದಾಡುತ್ತಿದ್ದಾಗ ಇದನ್ನು ನಾನು ಬರೆದಿದ್ದೆ. ಇದು ವಾಕ್-ಅರುಣವೂ ಹೌದು. ವಾಕ್-ಕರುಣವೂ ಹೌದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ