ಶನಿವಾರ, ಜನವರಿ 22, 2011

ವಾಲ್ಮೀಕಿ ಹೃದಯ.

ಗಿರಿ ತೊರೆಗಳ ತರುಲತೆಯಲಿ ನಲಿದಾಡಿವೆ ಉಲಿದು;
ಗಂಡು ಹೆಣ್ಣು ಬೇರೆ ಏನು? ಎಂದೊಲವಲಿ ನುಡಿದು.
ಎದೆಯೊಳಗಡೆ ನೆಗೆದಾಡಿದೆ ನಾಗರಮಿಡಿ ನೆಗೆದು,
ಹೃತ್ಕಮಲದ ಅಧೋಮುಖವು ರವಿ ಕಾಣಲು ಬಿರಿದು.

ಸುರತ ಸಂಗ ಸಂಭ್ರಮದಲಿ ಜೀವವೆರಡು ಏಕ.
ಪ್ರೇಮಾರ್ಪಣ ಸಂಯೋಗದಿ ತಾಣವದುವು ನಾಕ.
ನಾರುಮಡಿಯ ಆದಿಕವಿಯ ಹೃದಯ ಹ್ಲಾದ ಪಾಕ.
ನಲಿವಿನೊಲವು ಕಂಡು ಕಿವಿಯು ಕಣ್ಣಾಯಿತು ಮೂಕ.

ಕಣಕಣದಲಿ ಅನುರಣಿಸಿದೆ ಪಕ್ಷಿ ಪ್ರೇಮ ಗಾನ.
ಕ್ಷಣ ಕ್ಷಣಕೂ ಗುಣಿ ಗುಣಿಸಿದೆ ಪ್ರಣಯಿಗಳ್ ಇನಿ ತಾನ.
ಕವಿ ಹೃದಯದಿ ಜಿನುಗುತಿದೆ ಆನಂದದ ಬಾಷ್ಪ.
ಋಷಿ ಮನದಲಿ ರಸವುಕ್ಕಿದೆ. ಅರಳುತ್ತಿದೆ ಪುಷ್ಪ.

ಅಷ್ಟರಲ್ಲೇ ಬಾಣವೊಂದು ಹಠಾತ್ತಾಗಿ ನುಗ್ಗಿ ಬಂದು ರೆಪ್ಪೆಯೊಂದು ಹರಿಯಿತು.
ಆತ್ಮದ ಅದ್ವಯತೆ ಒಡೆದು, ಚೀರಾಟವು ತಾರಕಕ್ಕೆ ಪಾತಾಳಕೂ ಕೇಳಿತು.
ಎಲವೆಲವೋ ಕಟುಕ ಬೇಡ..! ಬೇಕೇ ಏನು ನಿನಗಿದು?
ಗಂಡು ಹೆಣ್ಣು ಕೂಡಿ ಇರಲು ಬಿಡದುದಾವ ಮನಸಿದು?”

ಎದೆ ನೊಂದಿತು. ಮನ ಮುದುಡಿತು. ವಿಷಾದ ರಸವು ಹರಡಿ.
ಹುತ್ತದ ಮಿಡಿ ಬುಸುಗುಟ್ಟಿತು; ನೀರಜ ಮೇಲ್ಮುಖವಾಗಿ.
ಸರ್ಗದ ಕ್ರಿಯೆ, ಲಯ ಪ್ರಕ್ರಿಯೆ, ಸ್ಥಿತ ಪ್ರಜ್ಞೆಗೆ ಬಂತು.
ಜೀವದ ನೋವೇ ಜಗದ ನೋವುಕಾವ್ಯದ ನೆಲೆ ಬಲಿತು.

ಧ್ಯಾನಮನದಿ ಋಷಿ ಹೃದಯದಿ ಕವಿ ಸಮಯವು ನೆಗೆದು,
ಛಂದ, ಕಂದ, ವೃತ್ತ ಬಂಧ; ನವರಸಗಳು ಹರಿದು.
ಮೈತಳೆದಿದೆ ಮಹಾಕಾವ್ಯ ರಾಮಾಯಣದರ್ಶನ.
ಹುತ್ತ ಬಿಟ್ಟ ಹಾವು ಕಂಡರದೇ ಸುಕೃತ ದರ್ಶನ.

ರಾಮಾಯಣದ ಆರಂಭಕ್ಕೆ ಕಾರಣವಾದ ಕ್ರೌಂಚವಧೆಯನ್ನು ಅವಲೋಕಿಸಿದ ಪರಿಣಾಮ ಈ ಕವನ. ಸ್ವಲ್ಪ ಆಧ್ಯಾತ್ಮದ ತುಣುಕುಗಳೂ ಒಳಗೆ ಸೇರಿವೆ. ಪ್ರಿಯ ಮಿತ್ರರು ಎಲ್ಲವನ್ನೂ ಸ್ವೀಕರಿಸುತ್ತೀರೆಂದು ತಿಳಿದಿದ್ದೇನೆ.

ಕಾಮೆಂಟ್‌ಗಳಿಲ್ಲ:

ಬೆಂಬಲಿಗರು

ನನ್ನ ಬಗ್ಗೆ

electrical engineer working in Mangalore chemicals and fertilisers. Mangalore