ಅಲ್ಲಿನ ಮಣ್ಣಿನ ಕಣಗಳೇ ಹಾಗೆ.
ಹುಚ್ಚನ ತಲೆ ನೆಟ್ಟಗಾಗಿಸುವ ಔಷಧಿಯ ಹಾಗೆ.
ಹೃದಯವಿರದವರಲ್ಲಿಯೂ ನಾಡಿ ಮಿಡಿಸಿದ ಊರು.
ಜನರ ಹೃದಯಗಳು ಮೃದು; ಆದರೆ ಬಾಯಿ ಸ್ವಲ್ಪ ಒರಟು, ಜೋರು.
ವರ್ಷ ವರ್ಷಗಳಿಂದ ನನ್ನ ತಲೆಯಲ್ಲಿ ಹೂತು ಹೋಗಿದ್ದ ಕವಿ ಕಳೆಬರವ ಹಿಡಿದೆತ್ತಿ,
ಅಂತಃಕರಣ, ಆತ್ಮೀಯತೆಯ ಆತ್ಮಜ್ಯೋತಿಯು ವಕ್ಷಪೀಠವ ಹತ್ತಿ.
ಸ್ನೇಹ ಸಂವಹಿಸಿತು, ಪ್ರೀತಿ ಪ್ರವಹಿಸಿತು. ಭಾವ-ಮುದ್ರೆಯ ಒತ್ತಿ.
ಪೇಲವ ಹೃನ್ಮನದೊಳಗೆ ನೂರು ಬಣ್ಣಗಳ ಚಿತ್ತಾರ, ಸಂಪನ್ನವಾಯಿತು ಚಿತ್ತ ಭಿತ್ತಿ.
ಸಾಧನಕೇರಿಯೊಳಗಿಂದ ಹೊರಹೊಮ್ಮುತಿದೆ ದಶದಿಸೆಗೆ, ಪದಗಾರುಡಿಗನ ನಾಕುತಂತಿಯ ಏಕತಾರಿ;
ಹೂಮುಡಿದು ಕೈಮುಗಿದು ಭೀಮಕಾಯನಿಗೊಂದು ನಮನ, ಜನಜಾತ್ರೆಯಾಯ್ತು ಶನಿವಾರದ ನುಗ್ಗಿಕೇರಿ.
ನಾದೋದ್ಧಾರಕ್ಕಾಗಿ ಗಂಗೆಯೇ ಅವತರಿಸಿಹಳಿಲ್ಲಿ- ನಿತ್ಯ ನೂತನಳಾಗಿ, ನಿರಂತರ ಸುಧೆಯಾಗಿ.
ನೆನೆದರೆ ಈಗಲೂ ಬಾಯಲ್ಲಿ ನೀರೂರುವುದು, ಅಂದು ಚಪ್ಪರಿಸಿ ಸವಿದ ಅಜ್ಜಿಯ ಕೈಯ್ಯಡುಗೆ-ಗೋಧಿಹುಗ್ಗಿ.
ಕಲ್ಲೆಸೆದ ಕಡೆಗೆಲ್ಲ ಸಾಹಿತಿಗಳೇ ತುಂಬಿರುವರಂತೆ; ರಕ್ತದೊಳಗಡೆ ಬೆರೆತು ಸಾಹಿತ್ಯದಮೃತ.
ಸಂತ ಷರೀಫರ ತವರು; ಮುನಿ ಮಹಾಂತರ ಬೆವರು; ಭಾವದೊಂದಿಗೆ ಬೆಸೆದಿದೆ ಕನ್ನಡ. ಬೇರೆ ಇಲ್ಲ ಸರ್ವಥಾ.
ತಟ್ಟಿ ರೊಟ್ಟಿಯನು ಗಟ್ಟಿ, ಜೊತೆಗೊಂದು ಹಿಡಿ ಪ್ರೀತಿಯನೂ ಅದಕೆ ಕಟ್ಟಿ, ಥಾಟಿನಲಿಟ್ಟು ಪಕ್ಕದಲಿ ಚಟ್ನಿಪುಡಿ, ಮಗ್ಗುಲಲಿ ಬಟ್ಟಲು ಕಾಳು ಪಲ್ಯದ ಖಾನಾ
ಕೊಟ್ಟಲ್ಲಿ ಕಥೆ ಮುಗಿಯಿತು(ನಮ್ಮದು!!). "ಸಾಕೇನು?" ಎಂದು ಎಂದೂ ಕೇಳುವವರಲ್ಲ ಈ ಮಂದಿ; "ಬೇಕಿಲ್ಲವೇಕೆ ಇನ್ನೂ?" ಎಂದೇ ಕೇಳುವರು ಎಲ್ಲರನ್ನ.
ಇಲ್ಲಿಯ ಜನಕೆ ಕಪಟ ವಂಚನೆಗಳು ಅಷ್ಟಾಗಿ ಹೆಚ್ಚು ಗೊತ್ತಿಲ್ಲ.
1 by 2 ಚಾ ಎನ್ನುವ ಮಾತೇ ಇಲ್ಲ, 3 in 1 ಚಾ ಎನ್ನುವ ಜನರೇ ಎಲ್ಲ.
ಮನಸು "ಸಾಣೆ ಹಿಡಿಯದ ವಜ್ರ, ಪುಟವಿಕ್ಕಿರದ ಚಿನ್ನ"ದಂತಿರುವ ಕಚ್ಚಾ ಅದಿರು ಸ್ವರೂಪ.
ಹೊರಗೆ ವಜ್ರಾದಪಿ ಎನಿಸಿದರೂ ಒಳಗೆ ಲೈನ್ ಬಜಾರ್ ಪೇಡೆಯಂತೆ; ಮಾತಿಗಿಳಿದರೆ ಹರಡುವುದು ಎಲ್ಲ ಕಡೆ ಪರಿಮಳದ ಸಲ್ಲಾಪ.
ಸಂಶಯ ಪದಾರ್ಥ:
೧.ಸಾಧನಕೇರಿಯ ಪದಗಾರುಡಿಗ- ವರಕವಿ ದ.ರಾ.ಬೇಂದ್ರೆ. ಕವಿಯೊಬ್ಬ ಜೀವ ಜಗತ್ತಿನಲಿ ಸಂಪೂರ್ಣ ಬೆಂದರೆ ಬೇಂದ್ರೆಯಾಗುವನೆಂದು ಜನ ಬಹಳ ಪ್ರೀತಿಯಿಂದ ಹೇಳುತ್ತಾರೆ. ಆದರೆ ಅಷ್ಟು ಬೇಯಲು ಬೇಂದ್ರೆಗೆ ಮಾತ್ರ ಸಾಧ್ಯವೆನಿಸುತ್ತದೆ. ಅದೇನೇ ಹೇಳಿ-ಜಗಕೆಲ್ಲ ಇರುವವರೊಬ್ಬರೇ ಬೇಂದ್ರೆ, ಬೆಂದ ಬೇಂದ್ರೆ.
೨.ನುಗ್ಗಿಕೇರಿ- ನಮ್ಮ ಕಾಲೇಜಿನ ಸಮೀಪವೇ ಇದ್ದ ಹನುಮಂತನ ದೇವಸ್ಥಾನ.
೩.ನಾದಗಂಗೆ- ಜಗತ್ತು ಕಂಡ ಹಿಂದೂಸ್ಥಾನಿ ಸಂಗೀತದ ಮಹಾನ್ ಗಾಯಕಿ, ಶ್ರೀ ಗಂಗೂಬಾಯಿ ಹಾನಗಲ್.
೪.ವಜ್ರಾದಪಿ-ಕುಸುಮಾದಪಿ-- "ವಜ್ರಾದಪಿ ಕಠೋರಾನಿ ಮೃದೂನಿ ಕುಸುಮಾದಪಿ"ಅಂತ ಒಂದು ಗಾದೆಯಿದೆ. ಅಂದರೆ ಹೊರಗೆ ಅವರ ವ್ಯಕ್ತಿತ್ವ ವಜ್ರದಷ್ಟು ಕಠೋರವಾಗಿ ಕಂಡರೂ ಒಳಗಿನ ಮನಸ್ಸು ಹೂವಿನಷ್ಟು ಮೃದು ಅಂತ.
"ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ" ಅಂತ ನಮ್ಮ ಕುವೆಂಪು ಕವಿಶೈಲದಲ್ಲಿ ನಿಂತು ಹಾಡಿದ ಹಾಗೆ "ಧಾರವಾಡವು ಬರೀ ಊರಲ್ಲವೋ, ಸಹೃದಯತೆಯ ನೆಲೆ ಕಾಣಿರೋ" ಅಂತ ಹಾಡುವಂತೆ ಎನಿಸಿದ್ದೇ ಈ ಕವನ ಬರೆಯಲು ಕಾರಣ. ಅಲ್ಲಿನ ೪ ವರ್ಷಗಳ ಜೀವನಾನುಭವ ನಿರ್ಮಲವೂ ಮಧುರವೂ ಆದದ್ದು. ಅರಸೀಕೆರೆ ಬಿಟ್ಟು ಬೇರೆ ಊರಿಗೆ ಓದೋಕ್ಕೆ ಹೋಗುವಾಗ ಆಗದಿದ್ದ ಬೇಜಾರು ಧಾರವಾಡ ಬಿಟ್ಟು ಬರುವಾಗ ಆಯ್ತು. ಏನೋ ಒಂದು ಮಧುರ ಸೆಳೆತ ಆ ಮಣ್ಣಿಗಿದೆ. ಜನರ ಮಾತು-ಮನಸು, ನಡೆ-ನುಡಿ ಎಲ್ಲವೂ ನಿಮಗೆ ಮೊದಲ ನೋಟಕ್ಕೆ ಹೊರಗಿಂದ ನೋಡುವಾಗ ಅಸೌಖ್ಯವೆನಿಸಿದರೂ ಹತ್ತಿರವಾದಂತೆಲ್ಲ ಮಲ್ಲಿಗೆಯ ಅತ್ತರಿನಂತೆ ಸುಖಾನುಭವ ಕೊಡುತ್ತದೆ. ಎಲ್ಲವೂ ಖುಲ್ಲಂ-ಖುಲ್ಲಾ. ಅವರ ನಿಸ್ಸಂಶಯವಾದ ಸ್ನೇಹಪೂರಿತ ಮನೋಭಾವ, ಭೋರ್ಗರೆಯುಯುವ ಪ್ರೀತಿ ತುಂಬಿದ ಮಾತುಗಳು ನನ್ನ ಮನದೊಳಗಣದ ಭಾವವನ್ನು ಉನ್ನತ ಮಟ್ಟಕ್ಕೇರಿಸಿದವು. ವಿಶಾಲ ಮನೋಭಾವದ ಆಲೋಚನೆಗಳು, ಎಲ್ಲರನ್ನೂ ಆದರಿಸುವ ಮನೋಧರ್ಮ, ಹಿತಾನುಭವ ಕೊಡುವ ಅನನ್ಯ ಅತಿಥಿ ಸತ್ಕಾರ, ಹೀಗೆ ಒಂದು ಒಟ್ಟಂದದ ಗುಣಧರ್ಮಗಳು ಆ ಮಣ್ಣಿನಲ್ಲಿ ಬೆರೆತು ಹೋಗಿದೆ. ಗಿಜಿಗುಡುವ ಹುಬ್ಬಳ್ಳಿ ಶಹರ ಪಕ್ಕದಲ್ಲಿದ್ದರೂ ತನಗೆ ಗೊತ್ತೇ ಇಲ್ಲವೆಂಬಂತೆ ಶಾಂತವಾಗಿದೆ. ಅಲ್ಲಿ ಸಂಕುಚಿತ ಮನಸ್ಸಿನವರು ಇಲ್ಲವೇ ಇಲ್ಲವೆಂದು ನಾನು ಹೇಳುತ್ತಿಲ್ಲ. ಆದರೆ ಅಲ್ಲಿ ಕೆಲವು ಜೀವನ ಮೌಲ್ಯಗಳು ಈಗಲೂ ಉತ್ತಮವಾಗಿದೆ. ಉಳಿದುಕೊಂಡಿದೆ.
ಬೇಂದ್ರೆ ಸಮಕಾಲೀನರಾದ ಶ್ರೀ ಶಂಕರ ಮೊಕಾಶಿ ಪುಣೇಕರ್ ರವರ "ಗಂಗವ್ವ ಗಂಗಾಮಾಯಿ" ಓದಿ. ಉತ್ತರ ಕರ್ನಾಟಕ ಭಾಷೆಯ ಮತ್ತು ಸಂಸ್ಕೃತಿಯ ಸಮರ್ಥ ಬಳಕೆಯಿಂದ ಕಾದಂಬರಿಯು ಅನನ್ಯವಾಗಿಯೂ ಅತ್ಯುತ್ತಮವಾಗಿಯೂ ಇದೆ.
ಎಲ್ಲರಿಗೂ ನಮಸ್ಕಾರ. ನಾನು ಹೀಗೆಯೇ ತರಗತಿಯೊಳಗೆ ಟೈಂಪಾಸ್ ಮಾಡೋದಕ್ಕೆ ಕವನ ಬರೆಯಲು ಶುರು ಮಾಡಿದೆ. ಆದರೆ ಅದು ತರಗತಿ ಮುಗಿದ ಮೇಲೂ ಮುಂದುವರಿದು ಬಿಡ್ತು. ಒಳ ಹೊರಗೆ ಬರೆದ, ಬರೆಯುತ್ತಿರುವ ಎಲ್ಲ ಬರಹಗಳನ್ನು ಈ ಮೂಲಕ ನಿಮ್ಮ ಮುಂದೆ ಇಡಲಿಚ್ಛಿಸುತ್ತಿದ್ದೇನೆ. ನನಗೆ ಅಷ್ಟೊಂದು ಶೃತಿ ಬದ್ಧವಾಗಿ ಅಲಂಕಾರಿಕವಾಗಿ ಸಂಕೀರ್ಣಶೈಲಿಯಲ್ಲಿ ಬರೆಯಲು ಬರುವುದಿಲ್ಲ. ನಡೆಯುವ ಮಗುವಿನ ಎಡವನ್ನು ಮನ್ನಿಸಿ,ಕೈ ಹಿಡಿದು ನಡೆಸುವಿರೆಂದು ತಿಳಿದಿರುವೆನು. ಓದಿ ಸಂತೋಷಿಸುವಿರೆಂದು ನನ್ನ ಭಾವನೆ. ನಿಮ್ಮ ಅಭಿಪ್ರಾಯವನ್ನು ಅಗತ್ಯವಾಗಿ ತಿಳಿಸಿ.
ಗುರುವಾರ, ಏಪ್ರಿಲ್ 30, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಬೆಂಬಲಿಗರು
ಬ್ಲಾಗ್ ಆರ್ಕೈವ್
-
►
2011
(3)
- ► ಜನವರಿ 2011 (3)
-
▼
2009
(8)
- ▼ ಏಪ್ರಿಲ್ 2009 (2)
- ► ಮಾರ್ಚ್ 2009 (6)
ನನ್ನ ಬಗ್ಗೆ
- chaitanya chintana
- electrical engineer working in Mangalore chemicals and fertilisers. Mangalore
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ