ಶನಿವಾರ, ಜನವರಿ 22, 2011

ವಾಲ್ಮೀಕಿ ಹೃದಯ.

ಗಿರಿ ತೊರೆಗಳ ತರುಲತೆಯಲಿ ನಲಿದಾಡಿವೆ ಉಲಿದು;
ಗಂಡು ಹೆಣ್ಣು ಬೇರೆ ಏನು? ಎಂದೊಲವಲಿ ನುಡಿದು.
ಎದೆಯೊಳಗಡೆ ನೆಗೆದಾಡಿದೆ ನಾಗರಮಿಡಿ ನೆಗೆದು,
ಹೃತ್ಕಮಲದ ಅಧೋಮುಖವು ರವಿ ಕಾಣಲು ಬಿರಿದು.

ಸುರತ ಸಂಗ ಸಂಭ್ರಮದಲಿ ಜೀವವೆರಡು ಏಕ.
ಪ್ರೇಮಾರ್ಪಣ ಸಂಯೋಗದಿ ತಾಣವದುವು ನಾಕ.
ನಾರುಮಡಿಯ ಆದಿಕವಿಯ ಹೃದಯ ಹ್ಲಾದ ಪಾಕ.
ನಲಿವಿನೊಲವು ಕಂಡು ಕಿವಿಯು ಕಣ್ಣಾಯಿತು ಮೂಕ.

ಕಣಕಣದಲಿ ಅನುರಣಿಸಿದೆ ಪಕ್ಷಿ ಪ್ರೇಮ ಗಾನ.
ಕ್ಷಣ ಕ್ಷಣಕೂ ಗುಣಿ ಗುಣಿಸಿದೆ ಪ್ರಣಯಿಗಳ್ ಇನಿ ತಾನ.
ಕವಿ ಹೃದಯದಿ ಜಿನುಗುತಿದೆ ಆನಂದದ ಬಾಷ್ಪ.
ಋಷಿ ಮನದಲಿ ರಸವುಕ್ಕಿದೆ. ಅರಳುತ್ತಿದೆ ಪುಷ್ಪ.

ಅಷ್ಟರಲ್ಲೇ ಬಾಣವೊಂದು ಹಠಾತ್ತಾಗಿ ನುಗ್ಗಿ ಬಂದು ರೆಪ್ಪೆಯೊಂದು ಹರಿಯಿತು.
ಆತ್ಮದ ಅದ್ವಯತೆ ಒಡೆದು, ಚೀರಾಟವು ತಾರಕಕ್ಕೆ ಪಾತಾಳಕೂ ಕೇಳಿತು.
ಎಲವೆಲವೋ ಕಟುಕ ಬೇಡ..! ಬೇಕೇ ಏನು ನಿನಗಿದು?
ಗಂಡು ಹೆಣ್ಣು ಕೂಡಿ ಇರಲು ಬಿಡದುದಾವ ಮನಸಿದು?”

ಎದೆ ನೊಂದಿತು. ಮನ ಮುದುಡಿತು. ವಿಷಾದ ರಸವು ಹರಡಿ.
ಹುತ್ತದ ಮಿಡಿ ಬುಸುಗುಟ್ಟಿತು; ನೀರಜ ಮೇಲ್ಮುಖವಾಗಿ.
ಸರ್ಗದ ಕ್ರಿಯೆ, ಲಯ ಪ್ರಕ್ರಿಯೆ, ಸ್ಥಿತ ಪ್ರಜ್ಞೆಗೆ ಬಂತು.
ಜೀವದ ನೋವೇ ಜಗದ ನೋವುಕಾವ್ಯದ ನೆಲೆ ಬಲಿತು.

ಧ್ಯಾನಮನದಿ ಋಷಿ ಹೃದಯದಿ ಕವಿ ಸಮಯವು ನೆಗೆದು,
ಛಂದ, ಕಂದ, ವೃತ್ತ ಬಂಧ; ನವರಸಗಳು ಹರಿದು.
ಮೈತಳೆದಿದೆ ಮಹಾಕಾವ್ಯ ರಾಮಾಯಣದರ್ಶನ.
ಹುತ್ತ ಬಿಟ್ಟ ಹಾವು ಕಂಡರದೇ ಸುಕೃತ ದರ್ಶನ.

ರಾಮಾಯಣದ ಆರಂಭಕ್ಕೆ ಕಾರಣವಾದ ಕ್ರೌಂಚವಧೆಯನ್ನು ಅವಲೋಕಿಸಿದ ಪರಿಣಾಮ ಈ ಕವನ. ಸ್ವಲ್ಪ ಆಧ್ಯಾತ್ಮದ ತುಣುಕುಗಳೂ ಒಳಗೆ ಸೇರಿವೆ. ಪ್ರಿಯ ಮಿತ್ರರು ಎಲ್ಲವನ್ನೂ ಸ್ವೀಕರಿಸುತ್ತೀರೆಂದು ತಿಳಿದಿದ್ದೇನೆ.

ರೇಣುದಂಡ


ಅಮ್ಮ ಅಂದರೆ ಸುಮ್ಮನೆ ಅಲ್ಲ.......ಆದರೆ ಗುಮ್ಮ ಅಲ್ಲ....

ಶುಕ್ರವಾರ, ಜನವರಿ 21, 2011

ವಾಕ್ಕರುಣ.

ನಾದಮೇಳಗಳೊಳಗೆ ರಾಗರಂಗಿನ ಹೊಳೆಗೆ ಹೊಳೆಯುತ್ತ ಹರಡಿರುವ ಶೃತಿ ಧಾತ್ರಿ ತಾಯೆ!
ನೃತ್ಯ ನೂಪುರದಲ್ಲಿ ತಾಳ ತಂಬೂರಿಯಲಿ ಕಾಣದೇ ಕಾಣುತಲಿರುವೆ; ನೀ ನಾದ ಮಾಯೆ!
ನಿನ್ನ ವಾಣಿ ವಿಲಾಸ- ನುಡಿ ಅರ್ಥ ವಿಸ್ತರಿಸೆ, ರಸ ಋಷಿಯು ಆಗುವನು ಮಂತ್ರ ದ್ರಷ್ಟಾರ.
ನಿನ್ನ ವೀಣೆಯ ನಾದ ನೂರುರಾಗದಿ ನುಡಿಯೆ, ನೆಲಮುಗಿಲ ನಡುವಿನಲಿ ಸಿಡಿಲ ಸಂಚಾರ .

ಶಬ್ದದಡವಿಯ
ನಡುವೆ ಸಿಲುಕಿರುವೆ ನಾನೀಗ. ಮರ ಮರದ ಮರ್ಮರವ ಕೇಳುತ್ತ ಕುಳಿತು.
ಹಣ್ಣೆಲೆಯು ಮಣ್ಣಾಗಿ, ಹಣ್ಣು ಬೀಜಗಳಾಗಿ ಚಿಗುರೊಡೆದ ಮೊಳಕೆಯಲಿ ಹೊಸ ಅರ್ಥ. ಧಾತು.
ಕಾಡಿನೆಲ್ಲೆಡೆ ಚೆಲುವು - ಕಾವ್ಯದಲ್ಲಿನ ಒಲವು ಹರಿದಂತೆ, ಸುರಿದಂತೆ ನಲಿದು;
ಮುಡಿಗೇರಬಯಸದ, ಮಡಿಯಾಗಲೊಲ್ಲದ ವನಸುಮದ ಪರಿಮಳವು ತೇಲಿಬಂದು.

ನೆಲ ಮುಗಿಲ ಸಂಧಿಸುವ ಸಂಭ್ರಮದ ಕ್ಷಣಕಾಗಿ ಬೇರೂರಿ ಕುಳಿತಿದೆ ಮರ, ಹಾರಲಿಕ್ಕೆ.
ಕಳಿತ ಫಲವೊಂದಕ್ಕೆ ಕಾದಿರುವೆ ನಾ ಕೆಳಗೆ. ಮರ ಪೂರ ಅರಗಿಸುವ ಸಾಹಸಕ್ಕೆ.
ಗೊಂಚಲಿಗೆ ಕೈ ಮಡಗಿ ದೀನನಾಗಿಹೆ ನಾನು; ಕರುಣಿಸು ಹೂಗಳನು ಮಾಲೆ ಕಟ್ಟಲಿಕ್ಕೆ.
ಮಧು ಬಟ್ಟಲಿಂದೊಂದು ಹನಿಯ ಬೇಡಿಹೆ ನಾನು; ಉದ್ಗೀಥದುದ್ಗಾರ ಮಾಡಲಿಕ್ಕೆ.

ಉದರದೊಳಗದರುತಿಹ ಪದ ನಾದ ಹೊರಹೊಮ್ಮಿಸು; ದವಡೆಗಳ ನಡುಸಿಕ್ಕಿ ಸಾಯದಂತೆ.
ಶಬ್ದ ನಿಧಿ ಪ್ರಾಂತದೆಡೆ ಕುಡಿ ನೋಟ ತೊಡು ಸಾಕು; ಅರ್ಪಿಸುವೆ ನವರತ್ನ ಕೃತಿಯ ಕಂತೆ.
ಪ್ರಜ್ಞೆಗೊಂದಾಜ್ಞೆ ಕೊಡು. ಸನ್ನಿಯಮಲುಣಿಸದಿರು. ಯಜ್ಞ ದೇವತೆ ನೀನು. ನಾನೊಂದು ದರ್ವಿ.
ಸರಸ್ವತೀ ಪ್ರವಾಹಕ್ಕೆ ಎದೆ ಸೆಟೆವ ಹೃದಯ ಕೊಡು. ಗುಂಡಿಗೆ ಕಾಂಡಕ್ಕೆ ಹರಿಸಿ ಅರುಣ ರಶ್ಮಿ.

ನನ್ನ ಸಂವೇದನೆಗಳಿಗೆ ಪದಗಳೇ ಸಿಕ್ಕದೆ ಪರದಾಡಿ ಕೊನೆಗೆ ವಾಕ್ಕಿನ ಅಧಿದೇವತೆಯಾದ ಶಾರದೆಯನ್ನು ಪ್ರಾರ್ಥಿಸಿದ ಕವನ ಇದು. ಬರೆದು ತುಂಬ ದಿನ ಆಯ್ತು. ಒಮ್ಮೆ ನನ್ನ ಭಾವನೆಗಳು ಮಾತಿನ ರೂಪ ಪಡೆಯಲು ಒದ್ದಾಡುತ್ತಿದ್ದಾಗ ಇದನ್ನು ನಾನು ಬರೆದಿದ್ದೆ. ಇದು ವಾಕ್-ಅರುಣವೂ ಹೌದು. ವಾಕ್-ಕರುಣವೂ ಹೌದು.

ಬೆಂಬಲಿಗರು

ನನ್ನ ಬಗ್ಗೆ

electrical engineer working in Mangalore chemicals and fertilisers. Mangalore