ಹಿಂದೊಮ್ಮೆ ಅ ತಿರುವಿನಂಚಿನ ತಿರುವಿನಲಿ, ನನ್ನೆಡೆಗೆ ಬಂದ ಕಿರುನಗೆಯ ನನಗೆಂದೇ ತಿಳಿದೆ;
ಅವಳು ಬಂದಂತೆಯೇ ಹೋಗಿಯೂ ಬಿಟ್ಟಳು. ತಿರುವಿನಲಿ ನಾನೊಬ್ಬನೇ ಉಳಿದೆ.
ಎಲ್ಲೋ ಯಾವಾಗಲೋ ಯಾರನ್ನೋ ನೆನೆಸಿ ನಕ್ಕ ನಗುವು ನಮಗೆಂದು ತಿಳಿಯಬೇಕೇಕೆ?
ಆದರೂ ಅನಂತ ವಿರಹದಿ ಸಖಿಯ ಬಯಸಿದ ಮನಸಿಗೆ ಸಿಕ್ಕ ಕನಸಿನ ರಾಣಿ ಆಕೆ!!
ಪ್ರೀತಿ ಪ್ರೇಮಗಳೆಂದರೆ ಅದೇನು ಹುಣಸೆ ಪಿಕ್ಕವೇ? ಸಿಕ್ಕ ಸಿಕ್ಕವರ ಮನದಲ್ಲಿ ಸಿಕ್ಕಲು,
ಅಂತರಂಗದಾ ತರಂಗ ಸಾಮ್ಯತೆ ಸಾಧಿಸಬೇಕು; ಅನನ್ಯ ಸುಮನೋಹರ ಸ್ವರ ಹೊಮ್ಮಲು.
ಯೌವ್ವನದ ಹುಚ್ಚುಹೊಳೆ, ದಡಗಳಲಿ ಮೋಹ ತುಂಬಿದ ಕಳೆ; ಸಂಜೀವಿನಿಯೇ ಅದೆಂದು ತಿಳಿದು ಔಷಧಿಯಾಗಿ ಬಳಸಿ
ಪ್ರಬುದ್ಧವಲ್ಲದ ಮನದ ರೋಗ ಉಲ್ಬಣಿಸಿದೆ. ಮಾಯಾಲೋಕದಲಿ ಬುದ್ಧಿಯನು ಸ್ಥಿಮಿತವಿಲ್ಲದೆ ಕುಣಿಸಿ.
ಎಲ್ಲೋ ಕಂಡ ರಂಗೇರಿದ ಚಿತ್ರಗಳ ಪ್ರಭಾವ,
ಮನದಲ್ಲಿ ಭಾವನೆಗಳ ಅಭಾವ;
ಯಾರನ್ನೋ ನೋಡಿ ಅನುಕರಿಸಿದ ಸ್ವಂತವಲ್ಲದ ಹಾವಭಾವ.
ತಲೆಬುಡವಿಲ್ಲದ ವರ್ಣನೆಗೆಟುಕದ ಸ್ವಭಾವ.
ಎಲ್ಲರನ್ನೂ ಮೀರಿ ಮೇಲೇರುವೆನೆಂಬ ಅತಿ ವಿಶ್ವಾಸ; ಧಾಷ್ಟ್ಯ ತುಂಬಿದ ಅಟ್ಟಹಾಸ.
ಲೋಕ, ಲೌಕಿಕ, ಭೋಗ.. ಹುಚ್ಚು ವ್ಯಸನದ ವ್ಯಾಮೋಹವೆಂದೆಣಿಸಿ ಸ್ವೀಕರಿಸಲೂಬಹುದು ಸಂನ್ಯಾಸ.
ಎಲ್ಲ ಧರ್ಮಶಾಸ್ತ್ರಗಳ ತಲೆ ತಿವಿದು, ಹೊಟ್ಟೆ ಬಗೆದು ಸತ್ಯವೊಂದನೇ ಬಯಸುವ ಅತೃಪ್ತ ಜೀವ;
ಸಮಾಜದ ಎಲ್ಲ ಸೊಟ್ಟ ಪಟ್ಟೆಗಳನ್ನು ಸುಟ್ಟು ಸರಿಪಡಿಸಬೇಕೆಂಬ ದೃಢ ಸಂಕಲ್ಪ ಭಾವ.
ಹೊತ್ತಿ ಉರಿಯುತ್ತಿರಲು ಆದರ್ಶಗಳ ಕೆಂಡ, ಕುದಿಯುತಲಿದೆ ನಾಳನಾಳದಲಿ ಬಿಸಿರಕ್ತ;
ನವ ವಿಶ್ವ ಸೃಷ್ಟಿಗೆ ಸಿದ್ಧವಾಗುತಿದೆ ಮಾನಸ ಯಜ್ಞಕುಂಡ, ಯುವಜನತೆಯೆನ್ನುವುದು ಸರ್ವಶಕ್ತ.
ಯೌವ್ವನವೆಂಬುದು--ಅನಂತ ಸಾಮರ್ಥ್ಯದ ಕುದುರೆ; ಪಾರ್ಥಸಾರಥಿ ಬೇಕು- ಹಿಡಿತದೊಳಗಿಡಲು.
ಭೋರ್ಗರೆದು ಹರಿವ ಹೊಳೆ; ವಜ್ರದಡಗಳು ಬೇಕು- ರಭಸವ ತಡೆ ಹಿಡಿಯಲು.
ಪ್ರಳಯಕಾಲದ ಕುಂಭದ್ರೋಣ ಮಳೆ; ಗೋವರ್ಧನ ಗಿರಿ ಬೇಕು- ಅದನೆದುರಿಸಿ ನಿಲ್ಲಲು.
ಬದುಕಿನೊಳು ಬೆರೆತ ಸುಂದರ ಲೀಲೆ; ದಿವ್ಯ ದೃಷ್ಟಿಯು ಬೇಕು- ಲಾಲಿತ್ಯದ ಸವಿ ಕಳೆಗಟ್ಟಲು.
ಯೌವ್ವನವೆಂಬ ಕಾಲಘಟ್ಟವೇ ಬದುಕಿನಲ್ಲಿ ಅತಿ ವಿಚಿತ್ರ. ಸಾಧಿಸಲು ಅಸಾಧ್ಯವಾದ ಸರ್ವವನ್ನೂ ಸಾಧಿಸುವೆನೆನ್ನುವ ಬುದ್ಧಿ, ಯಾವುದೋ ಹುಚ್ಚು ಕಾಮನೆಗಳಿಂದ ಪರಿಮಿತಿಗೊಳಗಾಗಿ ಅವ್ಯಕ್ತ ಮೋಹಪಾಶದೊಳಗೆ ಸಿಕ್ಕಿ ಸಾಯುವ ಮನಸು, ಬೇಕಿಲ್ಲದ ನೂರು ಭಾವನೆಗಳನ್ನು ಬೇಡವೆನಿಸಿದರೂ ಸೃಷ್ಟಿಸಿಕೊಂಡು ಅದರ ಬಲೆಯೊಳಗೆ ತಾನೆ ಸಿಕ್ಕಿ ಒದ್ದಾಡುವ ಅತಿ ವಿಚಿತ್ರವಾದ ಜೀವನದ ತುಣುಕು ಯೌವ್ವನ. ಕಾಲೇಜಿನಲ್ಲಿ ಓದಿದ "ಧಮನಿಯಲಿ ಬಿಸಿ ನೆತ್ತರುಕ್ಕುತಿಹ ಹೇ ಯುವಕ!!, ಹೊಸದೊಂದು ಬ್ರಹ್ಮಾಂಡ ಕಟ್ಟೋಣ ಬಾ" ಎಂಬ ಚಂದ್ರಶೇಖರ ಕಂಬಾರರ ಕವಿತೆ ಇನ್ನೂ ನನ್ನ ಮನದಲ್ಲಿ ಗುಂಯ್ಗುಡುತ್ತಿದೆ. ಸಾವಿರ ಕನಸುಗಳು, ಸಹಸ್ರ ಅಡ್ಡದಾರಿಗಳು, ಅನಂತ ಆಶಾವಾದಗಳು ಎಲ್ಲವನ್ನೂ ಹೊತ್ತು ಎಲ್ಲಿಗೆ ಮುಟ್ಟುತ್ತೇವೆಂದು ತಿಳಿಯದೇ ಎಲ್ಲೋ ಒಂದು ಕಡೆ ಮುಟ್ಟಬೇಕೆಂಬ ಗುರಿಹೊಂದಿ ಮುನ್ನುಗ್ಗಲು ಮುಂದಾಗುವ "ಅನಂತ ಸಾಮರ್ಥ್ಯ"ವೇ ಈ ಯೌವ್ವನದ ಮಹಾನ್ ಶಕ್ತಿ. ಸಾಯುವ ಸತ್ಯ ಗೊತ್ತಿದ್ದರೂ ಬದುಕಿಯೇ ತೀರುತ್ತೇನೆಂಬ ಛಲಹೊತ್ತು ಪ್ರವಾಹಕ್ಕೆದುರಾಗುವ ಪ್ರತಾಪ, ಬಿದ್ದರೆ ತಲೆಚಿಪ್ಪಿನ ಚೂರು ಕೂಡ ಸಿಗಲಿಕ್ಕಿಲ್ಲವೆನಿಸಿದರೂ ಪರ್ವತದಂಚಿನಿಂದ ಪಾತಾಳದ ತಳಕ್ಕೆ ನೆಗೆಯಬೇಕೆನ್ನುವ ಪ್ರಲಾಪ, ಸಮಯ ಸಿಕ್ಕದಿದ್ದರೂ ಸಿಕ್ಕ ಸಮಯವನ್ನೆಲ್ಲಾ ಹರಣ ಮಾಡುವ ಇದರ ಸ್ವರೂಪ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಬಿಡಿಸಲಾಗಿಲ್ಲ, ಉಣಬಡಿಸಲಾಗಿಲ್ಲ. ಅಂಥಾ ಅನೂಹ್ಯ ಭಾವಗಳು ಈ ಪಾಮರನ ದೃಷ್ಟಿ ದರ್ಶನಕ್ಕೆ ಬಿದ್ದಾಗ ಮೂಡಿದ ಭಾವಲಹರಿಯೇ ಈ ಪುಟ್ಟ ಕವನ. ಯೌವ್ವನದ ಭಾವಗಳು ಬಿಸಿರಕ್ತವಿರುವಾಗಲೇ ಬರೆಯುವುದು ಒಳ್ಳೆಯದೆನಿಸಿತು.......:) ಅದಕ್ಕಾಗಿ ಸಾಂದರ್ಭಿಕವಾಗಿ ಇದು ಮೂಡಿತು. ಓದಿ ಸವಿದು ಅಭಿಪ್ರಾಯ ತಿಳಿಸಿ. ಈ ಕಾಲಘಟ್ಟದ ಕುರಿತಾದ ಇನ್ನೊಂದು ಕವಿತೆಯನ್ನು "ಹರೆಯ" ಅನ್ನೋ ಶೀರ್ಷಿಕೆಯಲ್ಲಿ ಬರೆದಿದ್ದೇನೆ. ನೋಡಿ ಆನಂದಿಸಿ.